Popular Posts

Wednesday, August 10, 2011

I Hate Friendship Day

ಆತ ನನ್ನ ಆತ್ಮೀಯ ಗೆಳೆಯ. ಪದವಿಯಲ್ಲಿ ಒಟ್ಟಿಗೆ ಓದಿದ್ದೇವು. ಓದುವಾಗ ಕೇವಲ ಹಾಯ್-ಬಾಯ್ ಫ್ರೆಂಡ್ ಆಗಿದ್ದೇವು. ಪದವಿ ಮುಗಿಸಿ ಬೆಂಗಳೂರಿಗೆ ಬಂದ ಮೇಲೆ ಗೆಳೆತನ ಅತಿಯಾಗುವಷ್ಟು ಗಾಢವಾಯಿತು. ನಮ್ಮ ನಡುವೆ ಯಾವತ್ತು ಬಿನ್ನಾಭಿಪ್ರಾಯ ಬಂದಿರಲಿಲ್ಲ. ನಿಜ ಹೇಳಬೇಕೆಂದರೆ ನಾವಿಬ್ಬರು gay ಆಗಿದಿದ್ದರೆ ಖಂಡಿತ ಮದುವೆಯಾಗುತ್ತಿದ್ದೇವು(now its legal). ಮುಂದೇನೂ ಆ ಸಾಧ್ಯತೆಗಳು ಇಲ್ಲ ಬಿಡಿ. ಆತನಿಗೀಗ ಮದುವೆ ಆಗಿದೆ. ನಮ್ಮಿಬ್ಬರ ಗೆಳೆತನದ ಬಗ್ಗೆ ಆತನ ಹೆಂಡತಿಗೂ ಹೆಮ್ಮೆ ಇದೆ. ಸದಾ ನನ್ನ ಸುಖ-ದುಃಖಗಳಲ್ಲಿ ಆತ ಬೆನ್ನೆಲುಬಾಗಿ ನಿಂತಿದ್ದಾನೆ. ಆದರೆ ನಿನ್ನೇ ಆತ ನನ್ನ ಮೇಲೆ ಮೊದಲ ಬಾರಿಗೆ ಮುನಿಸಿಕೊಂಡಿದ್ದಾನೆ. ಕಾರಣ friendship dayಗೆ ನಾನು wish ಮಾಡದೇ ಇದ್ದಿದ್ದಕ್ಕೆ! ನನಗೆ ನಗಬೇಕೋ... ಅಳಬೇಕೋ... ತಿಳಿಯಲಿಲ್ಲ.

"ನಮ್ಮಿಬ್ಬರ ಗೆಳೆತನ ಇಂಥಹ ಅರ್ಥಹೀನ ಆಚರಣೆಗಳಿಗಿಂತ ಮಿಗಿಲಾದದ್ದು" ಅಂತ ಒಂದು text msg ಕಳಿಸಿದೆ. ಬಹಳ ಹೊತ್ತು ಉತ್ತರಕ್ಕಾಗಿ ಕಾದೆ. ಬರಲಿಲ್ಲ! ನನ್ನ ಮೇಲೆ ಇನ್ನು ಕೋಪವಿರಬಹುದೇ ಎಂಬ ಅನುಮಾನ ಮನಸ್ಸಿಗೆ ಬಂದರೂ, ಆತನ ಬಗ್ಗೆ ನಂಬಿಕೆ ಇತ್ತು. ಬಹುಶಃ ಉತ್ತರ ತುಂಬಾ ದೊಡ್ಡದಿರಬಹುದೆಂದು guess ಮಾಡಿದೆ. ನನ್ನ ಊಹೆ ಸರಿಯಾಗಿತ್ತು. ಆತನಿಂದ ಉತ್ತರ ಬಂತು. "ಹೌದು....... ನಾನೇ ನಿಂಗೆ friendship dayಗೆ wish ಮಾಡಬಹುದಿತ್ತಲ್ವಾ..? ನಾನ್ಯಾಕ್ ಮಾಡಿಲ್ಲ? ನಾನ್ಯಾಕೆ ಮೊದಲು ನೀನೇ wish ಮಾಡಲಿ ಅಂತ expect ಮಾಡ್ದೆ? ಯುಗಾದಿ, ಗಣೇಶ ಹಬ್ಬ, ಸ್ವಾತಂತ್ರ್ಯೋತ್ಸವಕ್ಕೆಲ್ಲಾ..​. ಎಲ್ಲರಿಗಿಂತ ಮೊದಲು ನಾನೇ wish ಮಾಡಲು ಹೆಮ್ಮೆಯೆನಿಸುತ್ತಿತ್ತು. ನಿನ್ನೇ ಯಾಕೆ ಹೀಗಾಯ್ತು? ಕ್ಷಮಿಸು ಗೆಳೆಯ.... I hate this friendship day! I am really sorry"

ಆತನ ಉತ್ತರ ನೋಡಿ ಮೂಡಿದ ನಗು ಮುಖದಿಂದ ಇನ್ನು ಮಾಸಿಲ್ಲ. ನಾನು ಉತ್ತರ ಕಳುಹಿಸಿದೆ. "Me too ಗೆಳೆಯ. Even I hate........."

Thursday, May 5, 2011

ಅಕ್ಷಯ ತೃತೀಯ, ಅಕ್ಷಯ ಪಾತ್ರೆಯಾಗಲಿ!

ಇವತ್ತು ಅಕ್ಷಯ ತೃತೀಯ. ಕನ್ನಡ ಪ್ರಭದ ಇಡಿ ಮುಖಪುಟವನ್ನೇ ಶುಭ್ ಜ್ಯುವೆಲ್ಲರ್ಸ್‍ನ ಜಾಹೀರಾತು ಆಕ್ರಮಿಸಿಕೊಂಡಿದೆ. TV ಚಾನೆಲ್ ತುಂಬೆಲ್ಲ ಅಕ್ಷಯ ತೃತೀಯ ಹಬ್ಬದ ಶುಭಾಶಯಗಳು ಹರಿದಾಡುತ್ತಿವೆ. ಅಕ್ಷಯ ತೃತೀಯ ಯಾವಾಗ ಹಬ್ಬವಾಯ್ತೋ ನನಗಂತು ನೆನಪಿಲ್ಲ. ಚಿನ್ನ ಖರೀಧಿಸುವವರಿಗಾಗಿಯೇ ಒಂದು ಹಬ್ಬವಂತೆ! ಯಾರಾದರೂ ಹಬ್ಬದೂಟಕ್ಕೆ ಕರೀತಾರೋ ಅಂತ ಕಾಯುತ್ತಿದ್ದೇನೆ. ಸದ್ಯಕ್ಕಂತೂ ಯಾರು ಕರೆದಿಲ್ಲ. ಯಾರಿಗೆ ಹಬ್ಬ ಇದೆಯೋ? ಇಲ್ಲವೋ? ಆದರೆ ಚಿನ್ನದಂಗಡಿಯವರಿಗಂತೂ ಹಬ್ಬವೋ ಹಬ್ಬ!

ಎಂಥಹ ವಿಪರ್ಯಾಸ ನೋಡಿ, ಒಂದು ಕಡೆ ಜನರು ಚಿನ್ನಕ್ಕಾಗಿ ಅಕ್ಷಯ ತೃತೀಯದಂದು ಮುಗಿಬೀಳುತ್ತಿದ್ದರೆ, ಇನ್ನೊಂದು ಕಡೆ ಜನರು ಅನ್ನಕ್ಕಾಗಿ ಅಕ್ಷಯ ಪಾತ್ರೆಯ ಕಡೆ ನೋಡುತ್ತಿದ್ದಾರೆ. ನನ್ನ ಪ್ರಕಾರ ಈ ದೇಶದ ಬಡ ಜನರು ಯಾವಾಗ ಚಿನ್ನ ಖರೀಧಿಸುವಷ್ಟು ಶಕ್ತರಾಗುತ್ತಾರೋ ಅವತ್ತೆ ಅಕ್ಷಯ ತೃತೀಯ! ಗ್ರೀಟಿಂಗ್ಸ್ ಸೇಲ್ ಮಾಡೋಕೆ ಲವರ್ಸ್ ಡೇ ನಾ ಹೇಗೆ ಮಿಸ್‍ಯ್ಯೂಸ್ ಮಾಡಿಕೊಳ್ಳುತ್ತಿದ್ದಾರೋ... ಹಾಗೇಯೇ ಚಿನ್ನನ ಸೇಲ್ ಮಾಡೋಕೆ ಅಕ್ಷಯ ತೃತೀಯವನ್ನು ಬಳಸಿಕೊಳ್ಳುತ್ತಿದ್ದಾರೆ. ದುಡ್ಡಿದ್ದರೆ ಚಿನ್ನ ಖರೀಧಿಸಿ... ನಿಮ್ಮ ದುಡ್ಡು, ನಿಮ್ಮಿಷ್ಟ! ಆದರೆ ದುಡ್ಡು ಜಾಸ್ತಿ ಇದ್ದರೆ ಅಕ್ಷಯ ಪಾತ್ರೆಗೆ donate ಮಾಡಿ. ನಾನು ಆ ಕೆಲಸ ಮಾಡುತ್ತಿದ್ದೇನೆ. ಹಾಗಂತ ದುಡ್ಡು ಜಾಸ್ತಿ ಇದೆ ಅಂದ್ಕೊಬೇಡಿ! ನನ್ನಿಂದ ಆದಷ್ಟು ಸಹಾಯ ಮಾಡುತ್ತಿದ್ದೇನೆ. ಚಿಕ್ಕ ಅಳಿಲು ಸೇವೆ! ಆ ಕೆಲಸ ಇಂದೆ ಮಾಡಿದರೆ ಹೆಚ್ಚು ಅರ್ಥಗರ್ಭಿತವಾಗಿರುತ್ತದೆ. ಅಕ್ಷಯ ತೃತೀಯ, ಅಕ್ಷಯ ಪಾತ್ರೆಯಾಗಲಿ!

Tuesday, March 8, 2011

ಸ್ತ್ರೀ... ಸ್ತ್ರೀಯಾಗೇ ಉಳಿಯಲಿ!

ರಾಷ್ಟ್ರಕವಿ ಜಿ ಎಸ್ ಶಿವರುದ್ರಪ್ಪ ವಿರಚಿತ ಈ ಗೀತೆ ಜಗತ್ತಿನ ಸಮಸ್ತ ಮಹಿಳೆಯರಿಗೆ ಅರ್ಪಣೆ. 
ಆಕಾಶದ ನೀಲಿಯಲ್ಲಿ
ಚಂದ್ರ ತಾರೆ ತೊಟ್ಟಿಲಲ್ಲಿ
ಬೆಳಕನಿಟ್ಟು ತೂಗಿದಾಕೆ
ನಿನಗೆ ಬೇರೆ ಹೆಸರು ಬೇಕೆ
ಸ್ತ್ರೀ ಎಂದರೆ ಅಷ್ಟೆ ಸಾಕೆ....

ಹಸಿರ ಉಟ್ಟ ಬೆಟ್ಟಗಳಲಿ
ಮೊಲೆ ಹಾಲಿನ ಹೊಳೆಯ ಇಳಿಸಿ
ಬಯಲ ಹಸಿರ ನಗಿಸಿದಾಕೆ
ನಿನಗೆ ಬೇರೆ ಹೆಸರು ಬೇಕೆ
ಸ್ತ್ರೀ ಎಂದರೆ ಅಷ್ಟೆ ಸಾಕೆ....

ಮರಗಿಡ ಹೂ ಮುಂಗುರುಳನು
ತಂಗಾಳಿಯ ಬೆರಳೂ ಸವರಿ
ಹಕ್ಕಿ ಗಿಲಕಿ ಹಿಡಿಸಿದಾಕೆ
ನಿನಗೆ ಬೇರೆ ಹೆಸರು ಬೇಕೆ
ಸ್ತ್ರೀ ಎಂದರೆ ಅಷ್ಟೆ ಸಾಕೆ....

ಮನೆಮನೆಯಲಿ ದೀಪ ಉರಿಸಿ
ಹೊತ್ತು ಹೊತ್ತಿಗೆ ಅನ್ನ ಉಣಿಸಿ
ತಂದೆ ಮಗುವ ತಬ್ಬಿದಾಕೆ
ನಿನಗೆ ಬೇರೆ ಹೆಸರು ಬೇಕೆ
ಸ್ತ್ರೀ ಎಂದರೆ ಅಷ್ಟೆ ಸಾಕೆ....
ಮತ್ತೊಂದು ದಿನ ಬಂದಿದೆ. Women's Day ಅಂತೆ. ನನಗೆ ನಿಜವಾಗ್ಲೂ ಗೊತ್ತಿರಲಿಲ್ಲ. ಬೆಳಗ್ಗೆ ನಿದ್ದೆಗಣ್ಣಿನಲ್ಲಿ ಕನ್ನಡಪ್ರಭ ನೋಡಿದಾಗಲೇ ಗೊತ್ತಾಗಿದ್ದು. ತಾಯಿಗೆ ಫೋನ್ ಮಾಡಿ wish ಮಾಡ್ದೆ. ‘ಅದ್ಯಾವುದೋ ಸುಡುಗಾಡು ಡೇ ?’ ಅಂದ್ರು. ನಮ್ಮಜ್ಜಿಗೆ ಫೋನ್ ಮಾಡಿದ್ರೆ ಇನ್ನೇನ್ ಬಯ್ತಾ ಇದ್ರೊ ಗೊತ್ತಿಲ್ಲ. ಈ fathers day, mothers day, valentines day, uncles day, aunty's day ಎಷ್ಟೊಂದು ದಿನಗಳು. ಮುಂದೆ S*X ಡೇ ಅಂತಾನೂ ಬರಬಹುದು. ಆವಾಗ ಯಾರು ಯಾರಿಗ್ ಬೇಕಾದ್ರೂ open ಆಗಿ ಕೇಳ್‍ಬಹುದು. ಯಾರು ಬೇಜಾರ್ ಮಾಡ್ಕೊಂಡ್ ಉಗಿಯುವ ಪ್ರಸಂಗಾನೂ ಇರಲ್ಲ. ಯಾಕೆಂದ್ರೆ Media ಅಷ್ಟೊಂದು ಪ್ರಚಾರ ಕೊಟ್ಟು already ಎಲ್ಲರ brain wash ಮಾಡಿರುತ್ತೆ. ಮುಂಚೆ ಯಾವುದಾದ್ರೂ ಹುಡುಗಿಗೆ ಲವ್ ಲೆಟರ್ ಕೊಟ್ರೆ ಚಪ್ಪಲಿ ಸೇವೆ ಅಥವಾ ಕೈಯಾರೆ ಮಂಗಳಾರತಿ ಆಗುತ್ತಿತ್ತು. ಈಗ ಪರಿಸ್ಥಿತಿ ಹಾಗಿಲ್ಲ. ಹುಡುಗಿರು ಅದನ್ನ sportive ಆಗಿ ತಗೋತಾರೆ. "Not Interested" ಅಂತ casual ಆಗಿ ಹೇಳುವಷ್ಟು ಮುಂದುವರೆದಿದ್ದಾರೆ. So... "ಆ" ಡೇ ವಿಷದಲ್ಲೂ ಹಾಗೇ ಆಗಬಹುದೇನೋ...?! ಮುಂಚೆ ಈ ಯಾವ ದಿನಗಳು ಇರಲಿಲ್ಲ. ಅದರ ಅವಶ್ಯಕತೆನೂ ನಮಗೆ ಇರಲಿಲ್ಲ . ಇದನ್ನ ಇಲ್ಲಿಗೆ ನಿಲ್ಸೋಣ... ಮತ್ತೆ ಈ ಬಗ್ಗೆ ಹೇಳ್ತಾ ಹೋದ್ರೆ... ನಮಗೆ ‘ಸಂಸ್ಕ್ರತಿ ರಕ್ಷಕ, RSS ಗುಲಾಮ’ ಅನ್ನೋ ಪಟ್ಟ ಕಟ್ಟೋ ಸಾಧ್ಯತೆ ಇದೆ.
ಇತ್ತೀಚೆಗೆ Paper ಓದಿದ್‍ಮೇಲೆ face book ನೋಡೋದು ದಿನಚರಿಯಾಗ್ ಬಿಟ್ಟಿದೆ. ನಮ್ಮ ಮುಖಪುಟ(face book)ದ ಗೋಡೆ(wall) ಮೇಲೆಲ್ಲಾ ಬರೀ Women's Day ಮೆಸೇಜ್‍ಗಳು. ಯಾಕೋ ಎಲ್ಲರಿಗೂ ಇವತ್ತು ಮಹಿಳೆಯರ ಮೇಲೆ ವಿಪರೀತ ಅಭಿಮಾನ-ಪ್ರೀತಿ ಉಕ್ಕಿ ಹರಿತಾ ಇದೆ ಅನ್ನಿಸೋಕೆ ಶುರುವಾಯ್ತು. ನಾವು ಒಂದು ದಿನ ಕನ್ನಡ ರಾಜ್ಯೋತ್ಸವ ಆಚರಿಸಿದರೂ ಮನಸ್ಸಿನ ಮೂಲೆಯಲ್ಲೆಲ್ಲೋ ಭಾಷೆ ಬಗ್ಗೆ ಅಭಿಮಾನ ದಿನಾಲೂ ಇದ್ದೆ ಇರುತ್ತದೆ. ದೇಶಾಭಿಮಾನದ ವಿಚಾರದಲ್ಲೂ ಹಾಗೇ..! ಅದೇ ರೀತಿ ಮಹಿಳಾ ಮೇಲಿನ ಗೌರವ-ಪ್ರೀತಿ ಒಂದು ದಿನಕ್ಕೆ ಮಾತ್ರ ಸೀಮಿತವಾಗದಿರಲಿ. ಅದೂ ಗಂಗೆಯಂತೆ ನಿರಂತರವಾಗಿ ಹರಿಯಲಿ. ‘ಸ್ತ್ರೀ’ ಗೆ ವಿಶೇಷವಾದ ಗೌರವ ಸ್ಥಾನ-ಮಾನ ಕೊಟ್ಟ ದೇಶ ನಮ್ಮದು. ಹಾಗೇ ‘ಸ್ತ್ರೀ’ಯನ್ನು ವಿಪರೀತವಾಗಿ ಶೋಷಿಸಿದ ದೇಶ ಕೂಡ ಹೌದು...! ಆ ಗೌರವ ಪ್ರೀತಿ ಹಾಗೇ ಉಳಿಯಲಿ. ಶೋಷಣೆ ಮಾತ್ರ ಅಳಿಯಲಿ.
ಸ್ತ್ರೀ.... ಎಡೆಗೆ ನಮ್ಮ ದೃಷ್ಟಿಕೋನವು ಬದಲಾಗಲಿ!                                   ಸ್ತ್ರೀ... ಸ್ಪೂರ್ತಿಯಾಗಲಿ!                                                                    ಸ್ತ್ರೀ... ಸಬಲೆಯಾಗಲಿ!                                                                       ಸ್ತ್ರೀ... ನಮಗೆ ಸರಿಸಾಟಿಯಾಗಿ ನಿಲ್ಲಲಿ!                                                 ಸ್ತ್ರೀ... ದೇವರಾಗಲಿ!                                                                          ಸ್ತ್ರೀ... ತಾಯಿಯಾಗಲಿ!                                                                     ಸ್ತ್ರೀ.... ಸ್ತ್ರೀಯಾಗೆ ಉಳಿಯಲಿ!                                                                    
ಜಗತ್ತಿನ ಸಮಸ್ತ ಮಹಿಳೆಯರಿಗೂ ‘ಮಹಿಳಾ ದಿನಾಚರಣೆಯ ಶುಭಾಶಯಗಳು’. Happy Women's Day
                                                                                                                                                                                                              

Sunday, March 6, 2011

ಒಂದು ಮಧುರ ಮೋಸ!

ಸಧ್ಯಕ್ಕೆ ನಾನಿರೋದು R.T.Nagar ದಲ್ಲಿರೋ ಸಾಯಿಬಾಬಾ ಮಂದಿರದ ಹಿಂದುಗಡೆ ಇರುವ ಒಂದು flatನಲ್ಲಿ. ಪ್ರತಿ ಗುರುವಾರ ಮಧ್ಯಾಹ್ನ ಸಾಯಿಬಾಬಾ ಮಂದಿರದಲ್ಲಿ ಅನ್ನ ದಾಸೋಹ ಇರುತ್ತದೆ. ಆದರೆ ಅಲ್ಲಿಗೆ ನಾನೆಂದೂ ಹೋದವನಲ್ಲ. ನಮ್ಮ ಅನ್ನ ಸ್ವಾಹ ಏನಿದ್ದರೂ ಪಕ್ಕದ main roadನಲ್ಲಿರೋ ‘ಶುಚಿ ಸಾಗರ್’ ಎಂಬ ಹೋಟೇಲಿನಲ್ಲಿ. "ಶುಚಿ ಸಾಗರ್"!! ಪಕ್ಕದ ಫೋಟೋ ನೋಡಿ ಇಲ್ಲೇನೋ spelling mistake ಇದೆಯಾ..? ಅದು "ಸಿಚಿ ಸಾಗರ್" ಇರಬಹುದಾ ಅಂತ ನಿಮಗನಿಸಬಹುದು. ಆದರೆ ನಂಬಿ... ಆ ಹೋಟೇಲಿನ ನಿಜವಾದ ಹೆಸರು ‘ಸಿಚಿ ಸಾಗರ್’ ಅಂತಾನೇ. ಸುಮಾರು 2 ತಿಂಗಳವರೆಗೂ ನಾನು ಕೂಡ "ಶುಚಿಸಾಗರ" ಅಂತಾನೆ "ನಂಬಿ"ಕೊಂಡು ಬಂದಿದ್ದೆ!!.
 
ನಾನು R.T.Nagarಕ್ಕೆ ಬಂದು ಆಗ 2 ತಿಂಗಳಷ್ಟೆ ಆಗಿತ್ತು. ಗೆಳೆಯ ನವೀನ್ ಸಾಗರ phone ಮಾಡಿ ಬರುತ್ತೇನೆ ಅಂದಾಗ ಅವನಿಗೆ ಅಡ್ರೆಸ್ ಹೇಳಿ ‘ಶುಚಿ ಸಾಗರ’ದ ಎದುರು ಬಂದಾಗ ಫೋನ್ ಮಾಡು ಅಂದಿದ್ದೆ. ಅವನು ಫೋನ್ ಮಾಡಿ "ಮಾರಾಯ ಹೋಟೇಲ್ ‘ಸಿಚಿ ಸಾಗರ’ದ ಎದುರು ನಿಂತಿದ್ದೇನೆ. ನೀನು ಹೇಳಿದ ‘ಶುಚಿ ಸಾಗರ’ ಎಲ್ಲೂ ಕಾಣಿಸ್ತಾ ಇಲ್ವೋ... ಇಲ್ಲಿರೋದು ಸಿಚಿಸಾಗರ ಮಾತ್ರ ಕಣೋ" ಅಂದ. ನನಗೆ ನಂಬೋಕೆ ಆಗ್ಲಿಲ್ಲ. ಎರಡು ತಿಂಗಳಿಂದ ದಿನಕ್ಕೆ 3 ಬಾರಿಯಂತೆ ಅದೇ ಹೋಟೇಲ್‍ಗೆ ಹೋಗಿದ್ದೆ. ನನ್ನಿಂದ ಇಷ್ಟು ದೊಡ್ಡ ಕಣ್ತಪ್ಪೆ..! ನಿನ್ನ ಹೆಸರಲ್ಲೇ ಸಾಗರ ಇರೋದ್ರಿಂದ ನೀನು ಸುಲಭವಾಗಿ ತಪ್ಪನ್ನ ಕಂಡುಹಿಡಿದೆ ಅಂತ ಗೆಳೆಯ ನವೀನ್ ಸಾಗರನನ್ನು ಕಿಚಾಯಿಸಿದ್ದೆ.


ಈಗ ಬಿಡಿ... ಹೋಟೇಲಿನ ಎಲ್ಲ ಸಿಬ್ಬಂದಿ ವರ್ಗದವರ ಜೊತೆ ಒಂದು ಅವಿನಭಾವ ಬಾಂಧವ್ಯ ಬೆಳೆದಿದೆ. ನನಗೀಗ ಅಲ್ಲಿ ವಿಶೇಷವಾದ ಗೌರವ ಸಿಗುತ್ತದೆ. ಹೋಟೇಲಿಗೆ ಕಾಲಿಟ್ಟೊಡನೆ ಕ್ಲೀನರ್‌ನಿಂದ ಹಿಡಿದು ಕ್ಯಾಶಿಯರ್‌ವರೆಗೂ ಎಲ್ಲರೂ ಒಂದು ವೆಲ್ ಕಮ್ ನಗುವನ್ನು ನನ್ನೆಡೆಗೆ ಚೆಲ್ಲುತ್ತಾರೆ. ಅಲ್ಲಿರೋರಲ್ಲಿ ನಮ್ಮ ಕುಂದಾಪುರ-ಉಡುಪಿಗೆ ಸೇರಿದವರ ಸಂಖ್ಯೆ ಜಾಸ್ತಿ ಇರುವುದರಿಂದ, ಬಾಂಧವ್ಯನೂ ಸ್ವಲ್ಪ ಜಾಸ್ತಿನೇ ಇದೆ. ಬಿಸಿಬೇಳೆಬಾತ್ order ಮಾಡಿದ್ರೆ, ಒಂದು ಸೌಟು ಹೆಚ್ಚಿಗೆ ಹಾಕಿ ನನ್ನೆದುರು ತಂದಿಡುತ್ತಾರೆ. ಅಷ್ಟೊಂದು ಪ್ರೀತಿ ನನ್ನ ಮೇಲೆ. ಅವರು ಆ ಪ್ರೀತಿ ತೋರಿಸಿದಾಗಲೆಲ್ಲಾ ನನಗೆ "ಆ" ಘಟನೆ ನೆನಪಾಗಿ ಮನಸ್ಸಲ್ಲಿ ಏನೋ ಒಂಥರ ಕಸಿವಿಸಿಯಾಗುತ್ತದೆ.


ಒಂದು ವರ್ಷದ ಹಿಂದಿನ ಮಾತು. ಹೋಟೇಲಿನವರ ಜೊತೆಗೆ ನನಗಿನ್ನೂ ಬಾಂಧವ್ಯ ಕುದುರಿಲ್ಲದ ದಿನವದು. ನಾನು ಆ areaಗೆ ಬಂದು 2 ತಿಂಗಳಷ್ಟೆ ಆಗಿತ್ತು. ಅಂದು ಮಧ್ಯಾಹ್ನ north indian meals ಆರ್ಡರ್ ಮಾಡಿ ಭವಿಷ್ಯದ ಬಗ್ಗೆ ಚಿಂತಿಸುತ್ತಾ ಕೂತಿದ್ದೆ. "ಸರ್ ನಮಸ್ಕಾರ " ಎಂಬ ಮಾತಿನೊಂದಿಗೆ ವ್ಯಕ್ತಿಯೊಬ್ಬ ನನ್ನೆದುರಿನ ಖುರ್ಚಿಯ ಮೇಲೆ ಬಂದು ಸ್ಥಾಪಿತನಾದ. ಇಬ್ಬರೂ ಒಬ್ಬರನ್ನೊಬ್ಬರು ನೋಡಿಕೊಂಡು ನೆನಪಿಸಿಕೊಳ್ಳೋ ಪ್ರಯತ್ನ ಮಾಡಿದೆವು... ಕೊನೆಗೆ ಆತನೇ ನನ್ನ ಮೌನ ಮುರಿದು "ಸರ್... ನೀವು ಸಿನೆಮಾದಲ್ಲಿ work ಮಾಡುತ್ತೀರಿ ತಾನೇ..?" ಅಂದಾಗ ಹೌದು ಅಂತ ತಲೆಯಾಡಿಸಿದೆ. ಅವನು "ನಾನು ಸಾರ್..! ನೀವು ‘ಸವಿ ಸವಿ ನೆನಪು’ ಚಿತ್ರದಲ್ಲಿ associate director ಆಗಿದ್ದಾಗ, ನಿಮ್ಮ ಹತ್ರ ನಟನೆಗಾಗಿ chance ಕೇಳಿಕೊಂಡು ಬಂದಿದ್ದೆ. ನೀವು ಕೊಡುತ್ತೀನಿ ಅಂತ promise ಮಾಡಿ, ಕೊನೆಗೆ ಕೊಡಲೇ ಇಲ್ಲ" ಅಂದ. ಉಹುಂ ನನಗೆ ನಿಜಕ್ಕೂ ಅವನು ಹೇಳಿದ ಘಟನೆ ನೆನಪಿಗೆ ಬರಲೇ ಇಲ್ಲ. ನಾನು ಮರೆತಿರುವುದನ್ನೆ ಆತ ನನ್ನ ಅಹಂಕಾರ ಅಂದುಕೊಂಡಾನೋ ಅಂತ ಭಾವಿಸಿ, ಬಲವಂತದ ನಗುವನ್ನು ತಂದುಕೊಂಡು ಅವನಿಗೆ ಶೇಕ್ ಹ್ಯಾಂಡ್ ಕೊಟ್ಟು ಹೇಗಿದ್ದೀರಿ ಅಂತ ಕೇಳಿದೆ. ಇದನ್ನೆಲ್ಲಾ ಅಲ್ಲೇ ನಿಂತು ಗಮನಿಸುತ್ತಿದ್ದ ಹೋಟೇಲ್‍ನ supplier ಆ ವ್ಯಕ್ತಿಗೆ ಏನು ಬೇಕೆಂದು ಕೇಳಿದ. ಆತನೂ north indian meals ಅಂತ order ಕೊಟ್ಟ.


ಜೊತೆಯಲ್ಲಿ ಊಟಮಾಡುತ್ತಾ ಇಬ್ಬರ ನಡುವೆ ಚಿತ್ರರಂಗದ ಆಗು-ಹೋಗುಗಳ ಬಗ್ಗೆ discussion ನಡೆಯಿತು. ಆತ ನನಗಿಂತ ಬೇಗ ಊಟ ಮುಗಿಸಿದ್ದ. ಕೈ ತೊಳೆಯಲು ಹೋದವನು ವಾಪಸ್ಸು ಬರುವಾಗ mobileನಲ್ಲಿ ಮಾತನಾಡುತ್ತಾ ಬಂದು ನನಗೆ ಶೇಕ್ ಹ್ಯಾಂಡ್ ಕೊಟ್ಟು "ಸರ್... important ಫೋನ್ ಕಾಲ್ ಇದೆ. ಮತ್ತೊಮ್ಮೆ ಸಿಗುತ್ತೇನೆ" ಎಂದು ಹೇಳಿ ಹೊರಟು ಹೋದ. ನಾನು ನಿಧಾನಕ್ಕೆ ಊಟ ಮುಗಿಸಿ ಕೈತೊಳೆದುಕೊಂಡು ಮತ್ತೆ ಟೇಬಲ್ಲಿಗೆ ಬಂದಾಗ, ನನ್ನ ಬಿಲ್ಲು(bill) ನನಗಾಗಿ ಕಾದಿತ್ತು. ಬಿಲ್ಲನ್ನು ತೆಗೆದುಕೊಂಡು 50 ರೂ ನೋಟಿನ ಜೊತೆಗೆ ಕ್ಯಾಶಿಯರ್‌ಗೆ ಕೊಟ್ಟಾಗ, ಆತ "ಸರ್... 90 ರೂಪಾಯಿ ಆಗಿದೆ" ಅಂದ. ಒಂದು north indian mealsಗೆ 45 ರೂಪಾಯಿ ಅನ್ನುವುದು ನನಗೆ ಚೆನ್ನಾಗಿ ನೆನಪಿತ್ತು. ಕೂಡಲೇ ಬಿಲ್ಲನ್ನು ನೋಡಿದಾಗ ಅದರಲ್ಲಿ ಆತನ ಊಟದ ಚಾರ್ಜನ್ನೂ ಸೇರಿಸಲಾಗಿತ್ತು. ನಾನು ಕೂಡಲೇ "ಆತ ನನ್ನ ಗೆಳೆಯನಲ್ಲ. ಎಲ್ಲೋ ನೋಡಿದ ನೆನಪಷ್ಟೆ. ಆತನ ಬಿಲ್ಲನ್ನು ನನ್ನ ಜೊತೆ ಸೇರಿಸಿದ್ದು ಎಷ್ಟು ಸರಿ" ಎಂದು ತಗಾದೆ ತೆಗೆದೆ. ಮಾಣಿ confusion ಮಿಶ್ರಿತ ಭಯದಲ್ಲಿ ಏನೂ ಮಾತನಾಡುವುದೆಂದು ತಿಳಿಯದೆ ಒದ್ದಾಡಿದ. ನಾನು ಕೂಡಲೇ "ಹೋಗ್ಲಿ ಬಿಡಿ. ಮುಂದಿನ ಬಾರಿ ಹುಷಾರಾಗಿರಿ" ಎಂದು ಇನ್ನೊಂದು 50 ರ ನೋಟನ್ನ ಕ್ಯಾಶಿಯರ್ ಟೇಬಲ್ ಮೇಲಿಟ್ಟೆ. ಆತ 5 ರೂ ಚಿಲ್ಲರೆ ಜೊತೆ 50 ರ ನೋಟನ್ನು ವಾಪಸ್ಸುಕೊಡುತ್ತಾ "ಸ್ಸಾರಿ ಸರ್... ನಮ್ಮದೆ ತಪ್ಪು. ನಮ್ಮ ಹುಡುಗ ಕೇಳಿ ಬಿಲ್ ಮಾಡಬೇಕಿತ್ತು. ಸ್ಸಾರಿ... ಥ್ಯಾಂಕ್ ಯೂ" ಅಂದ. ನಾನು ನೋಟನ್ನು ಚಿಲ್ಲರೆಯನ್ನು ಜೇಬಿಗಿಳಿಸಿ ಮನೆಕಡೆ ಹೆಜ್ಜೆ ಹಾಕಿದೆ.


ಮನೆಗೆ ಬಂದು ಕಾಲಿಂಗ್ ಬೆಲ್ ಒತ್ತಿದೆ. Door ಒಪನ್ ಆದಾಗ ಅದೇ ‘ಆತ’ ಕಣ್ಣು ಮಿಟುಕಿಸಿ ನಗುತ್ತ ಎದುರಲ್ಲಿ ನಿಂತಿದ್ದ. ನಾನು ಒಮ್ಮೆ serious ಆಗಿ ಅವನ ಕಡೆ look ಕೊಟ್ಟು ನಂತರ ಪಳ್ಳನೆ ನಕ್ಕು ಒಳಗೆ ಹೋದೆ. ಇಬ್ಬರೂ 10 ನಿಮಿಷ uncontrolled ಆಗಿ ನಾನ್ ಸ್ಟಾಪ್ ನಗು ನಕ್ಕೆವು. ‘ಆತ’ ಅದೇ ಗೆಳೆಯ. ಶುಚಿಯಲ್ಲ ಸಿಚಿ ಎಂದು ‘ಕಣ್ಣು ತೆರೆಸಿದ್ದ’ ನವೀನ್ ಸಾಗರ.!! ಆವತ್ತು ನನ್ನ ಜೇಬಿನಲ್ಲಿದದ್ದು 100 ರೂಪಾಯಿ ಮಾತ್ರ. ಹಾಗೂ ಅವನ ಜೇಬಿನಲ್ಲಿ ಬಿಡಿಗಾಸೂ ಇರಲಿಲ್ಲ. ಇರುವ 100 ರೂಪಾಯಿಯಲ್ಲಿ ನಾನು ನಾಳೆ(ಗಳನ್ನು)ಯನ್ನು ಕಳೆಯಬೇಕಾಗಿತ್ತು. ನಾಡಿದ್ದು ನನಗೆ ದುಡ್ಡು ಬರುವುದಿತ್ತು( ನಂಬಿ!). ಅಂಥ ದಿನದಲ್ಲಿ ಇಂಥ ಮೋಸವೊಂದು ನಡೆದುಹೋಯಿತು. ಅದರ ಬಗ್ಗೆ ನನಗೆ ವಿಷಾದವಿಲ್ಲ. ಅದಕ್ಕೆ ನಾನದನ್ನು ಕರೆಯುತ್ತೇನೆ "ಒಂದು ಮಧುರ ಮೋಸ" ಎಂದು.


ಈಗಲೂ ನಾನು ಆ ಹೋಟೇಲಿನ ಖಾಯಂ ಗಿರಾಕಿ. ಆದರೆ ನನ್ನ ಗೆಳೆಯ ನವೀನ್ ಸಾಗರ್ ಬಂದಾಗ ಮಾತ್ರ ಬೇರೆ ಹೋಟೇಲ್ ಹುಡುಕಿಕೊಂಡು ಹೋಗುತ್ತೇವೆ. ಎಲ್ಲಾದರೂ ಆ supplier ನಮ್ಮನ್ನು ಗುರುತಿಸಬಹುದು ಎಂಬ ಭಯ ಗೆಳೆಯ ನವೀನನಿಗೆ!. ದುಡ್ಡಿದ್ದರೂ ಆ ಹೋಟೇಲ್‍ಗೆ ಹೋಗದೆ ಇರೋ ಥರ ಮಾಡ್ಬಿಟ್ಟೆಯಲ್ಲೊ ಪಾಪಿ ಅಂತ ಅವನು ನಗುನಗುತ್ತಾ ರೇಗುತ್ತಾನೆ. ರೇಗಲಿ ಬಿಡಿ. ಯಾಕೆಂದರೆ ಆವತ್ತಿನ ನಮ್ಮ ಮೋಸಕ್ಕೆ screenplay ಹೆಣೆದು ನಿರ್ದೇಶನ ಮಾಡಿದ್ದು ನಾನೇ...!

Saturday, March 5, 2011

ಬ್ಲಾಗು ಬರೆಯೋದಕ್ಕೆ ಕಾರಣ


ಬ್ಲಾಗು ಬರೆಯೋದಕ್ಕೆ ಕಾರಣ? ಅಥವಾ ರಾಘು ಬರೆಯೋದಕ್ಕೆ ಕಾರಣ? ಇವರೆಡು ಪ್ರಶ್ನೆಗಳಲ್ಲಿ ಜಾಸ್ತಿ ವ್ಯತ್ಯಾಸ ಏನೂ ಇಲ್ಲ. ಅಂಥಹ ದೊಡ್ಡ ಕಾರಣನೂ ಇಲ್ಲ ಬಿಡಿ. ಅಸಲೀ ವಿಷಯ ಏನಾಪ್ಪ ಅಂದರೆ, ನನಗೆ ನನ್ನದೇ ಸ್ವಂತದ್ದೊಂದು ಬ್ಲಾಗು ಬರೆಯಬೇಕು ಅನ್ನೋದು ಬಹಳ ದಿನದ ಆಸೆಯಾಗಿತ್ತು. ಅದಕ್ಕಾಗಿ 6 ತಿಂಗಳ ಹಿಂದೆ ಈ ಬ್ಲಾಗನ್ನು ರೆಡಿ ಮಾಡಿಟ್ಟುಕೊಂಡು ಕೂತಿದ್ದೆ. ಆದರೆ ಒಂದಕ್ಷರಾನೂ ನನ್ನಿಂದ ಬರೆಯಲು ಸಾಧ್ಯವಾಗಿಲ್ಲ. ಅಷ್ಟಕ್ಕೂ ಬ್ಲಾಗು ಯಾಕೆ ಬೇಕು? ಅದನ್ನ ಯಾಕೆ ಬರೆಯಬೇಕು? ಈ ಪ್ರಶ್ನೆಗೆ ನನ್ನಲ್ಲಿ ಉತ್ತರವಿಲ್ಲ. ಅದಕ್ಕೆ ಉತ್ತರವೂ ನನಗೆ ಬೇಕಿರಲಿಲ್ಲ. ಯಾಕೆಂದರೆ ಈ ಬ್ಲಾಗ್‍ನಿಂದ ನನಗೆ ಆಗಬೇಕಾದದ್ದು ಏನೂ ಇಲ್ಲ. ಆದರೂ ನಾನು ಬ್ಲಾಗು ಬರೆಯಬೇಕು. ಚಿಕ್ಕ ಮಗುವಿನಂಥ ಹಠ ನನ್ನದು. ಆ ಹಠಕ್ಕೆ ಬಿದ್ದು ಬರೆಯುತ್ತಿದ್ದೇನೆ. ಅದೊಂದು ಚಿಕ್ಕ ಆಸೆ ಅಷ್ಟೆ! ಇಂಥಹ ಚಿಕ್ಕ ಚಿಕ್ಕ ಆಸೆಗಳಿಂದ ಸಂತೋಷ ಪಡುವುದು ಚಟವಾಗಿ ಬಿಟ್ಟಿದೆ ನನಗೆ . ಆದರೆ ಈ ಆಸೆ ಮೊಳಕೆ ಒಡೆದದ್ದು ಒಂದು ಥರನಾದ jealousನಿಂದ ಅಂದರೆ ನೀವು ನಂಬಲೇ ಬೇಕು. ಹೌದು... ಹೊಟ್ಟೆಕಿಚ್ಚು ಪಡುವಂತೆ ಬರೆದ ಕೆಲವರ ಬ್ಲಾಗುಗಳನ್ನು ಓದಿ, ನನಗೂ ಬ್ಲಾಗು ಬರೆಯಬೇಕು ಅನ್ನಿಸಿತು. ಇದರಲ್ಲಿ ಯಾವುದೇ ಮುಚ್ಚುಮರೆಯಿಲ್ಲ. ಜೊತೆಗೆ ಇದರಿಂದ ನನಗೆ ಆಗುವ ನಷ್ಟವೇನೂ...? ಇದನ್ನು ಓದಿದವರಿಗೂ ಆಗುವ ನಷ್ಟವೇನು..? ಇವನ್ನೆಲ್ಲಾ ತುಂಬಾ deep ಆಗಿ ಯೋಚಿಸಿದಾಗ, ನನಗೇನೂ ಅಂಥಹ ಹೇಳಿಕೊಳ್ಳುವ ನಷ್ಟವಿಲ್ಲ. ಆದರೆ ಓದುವವರಿಗೆ...? ಎಲ್ಲೋ ಅವರಿಗೆ ನನ್ನ ಬರಹಗಳು ತಲೆನೋವು ತಂದರೆ, ಒಂದು ಅನಾಸಿನ್ waste ಆಗಬಹುದೇನೋ ಅಷ್ಟೇ..! ಅದು ಬಿಟ್ಟರೆ ಅವರಿಗೂ ಅಂಥಹ ಹೇಳಿಕೊಳ್ಳುವ ನಷ್ಟವಿಲ್ಲ. ಜೊತೆಗೆ face bookನಲ್ಲಿ ಕೆಮ್ಮಿದರೂ ರಿಪ್ಲೈ ಮಾಡುವಂಥ ನನ್ನ ಗೆಳೆಯರು, ನನ್ನ ಬರಹಕ್ಕೆ ಒಂದಷ್ಟು ಒಳ್ಳೆಯ ಕಮೆಂಟ್ ಮಾಡದೇ ಇರುತ್ತಾರೆಯೇ..? ಇಂಥಹ over confident ನಿಲುವುಗಳಿಂದ ಕೊನೆಗೂ ಬ್ಲಾಗು ಬರೆಯಲೇ ಬೇಕೆಂದು ನಿರ್ಧರಿಸಿದೆ.